Monday, September 10, 2012

ರಾಜಾರಾಮ ಕಚೇರಿಯಿಂದ ಬಂದವನೇ ಎಂದಿನಂತೆ 'ಜಾನಕಿ,ಸ್ವಲ್ಪ ಚಹಾ ಮಾಡ್ತಿಯೇನೆ?','ಇವತ್ತು ಕಾಂತಿ ಸ್ವೀಟ್ಸ್ನಿಂದ ಜಿಲೇಬಿ,ಜಹಾಂಗೀರು ತಂದಿದ್ದೀನಿ ನೋಡೆ,ಮಕ್ಕಳಿಗೆಲ್ಲ ಕರೆದುಕೊಡೆ' ಎಂದು ಹೇಳಿ ಹೆಂಡತಿ ತಂದು ಕೊಟ್ಟ ಚಹಾ,ಶ್ಯಾವಿಗೆ ಉಪ್ಪಿಟ್ಟು ನಿಧಾನವಾಗಿ ಸವಿಯತೊಡಗಿದರು.ಜಾನಕಮ್ಮನವರು 'ಇವತ್ತು ಜಿಲೇಬಿ ತಿನ್ನಬೇಕೆಂದು ಬಹಳ ಅನ್ನಿಸ್ತಾ ಇತ್ತು,ಅದೇ ಹೇಗೆರೀ ನಿಮಗೆ ಗೊತ್ತಾಯ್ತು? 'ಎಂದು ಹೇಳಿ  ಮಗನನ್ನು ಕೂಗಿದಳು.




ಆಟ ಮುಗಿಸಿ ಅದೇ ತಾನೇ ಬಂದ ಗಗನ್ ಕೈ ಕಾಲು ತೊಳೆದು ತಂದೆಯೊಡನೆ ಕುಳಿತು ಇನ್ನೇನು ಇಲ್ಲಾ ಜಿಲೇಬಿಯನ್ನು ಮುಗಿಸುತ್ತಾನೆ ಎನ್ನುವಷ್ಟರಲ್ಲಿ 'ಅಕ್ಕಂಗೂ ಸ್ವಲ್ಪಾ ಇಡೋ' ಎಂದಳು ಅಮ್ಮ.ಇದನ್ನು ಕೇಳಿದ ರಾಜಾರಾಮ ಮಗಳೆಲ್ಲಿ,ಕಾಣಿಸ್ತಾ ಇಲ್ವಲ್ಲಾ ?,ಎಂದಾಗ 'ಇನ್ನೂ ಬಂದಿಲ್ಲಾರಿ,ಸ್ಪೆಷಲ್ ಕ್ಲಾಸ್ ಇರಬೇಕು,ಇತ್ತೀಚಿಗೆ ದಿನಾಲೂ ಸ್ಪೆಷಲ್ ಕ್ಲಾಸ್ ಇರುತ್ತೆ,ಎಂದರು ಜಾನಕಮ್ಮನವರು.

ದಿನಾಲೂ ರಾಜಾರಾಮ ಕಚೇರಿಯಿಂದ ಬರುವಷ್ಟರಲ್ಲಿ ಬರುತ್ತಿದ್ದ ರಾಧಾ ,ಇತ್ತೀಚಿಗೆ ಸ್ಪೆಷಲ್ ಕ್ಲಾಸ್ ಇದೆಯೆಂದು ತಡವಾಗಿ ಬರುತ್ತಿದ್ದಳು.ಬೆಳೆದ ಮಗಳಿಗೆ ಡಿಗ್ರಿ ಮುಗಿಯುತ್ತಿದ್ದಂತೆ ಆದಷ್ಟು ಬೇಗ ಮದುವೆ ಮಾಡಬೇಕು ,ದಿನೇ ದಿನೇ ವರದಕ್ಷಿಣೆ ಹೆಚ್ಚಾಗುತ್ತಿದೆ ,ಈ ಕಾಲದಲ್ಲಿ ಒಳ್ಳೆಯ ಹುಡುಗನನ್ನು ಹೇಗೆ ಹುಡುಕುವುದು ಎಂದೆಲ್ಲಾ ದಿನಾಲೂ ಯೋಚಿಸುತ್ತಿದ್ದರು.

ರಾತ್ರಿ ಎಂಟಾದರೂ ಬರದಿರುವುದನ್ನು ನೋಡಿ ತಂದೆಗೆ ಚಿಂತೆ ಹತ್ತಿತ್ತು.ಅದೂ ಒಂದತ್ತು ದಿನದಿಂದ ಇದೇ ರೀತಿ ತಡವಾಗಿ ಬರುವ ವಿಚಾರ ಕೇಳಿ ಇನ್ನೂ ಹೆದರಿತು ಮನ.ಬೆಳಿಗ್ಗೆ ಪೇಪರಿನವನು ಬರದಿದ್ದುದು ನೆನಪಾಯಿತು.ದಿನಾಲೂ ಬರುವ ಪೇಪರಿನವನ ಬದಲು ಇಂದು ಮತ್ತೊಬ್ಬ ಹುಡುಗ ಬಂದಿದ್ದ.ಈ ವಿಚಾರ ಬಂದೊಡನೆ ರಾಜಾರಾಮನ ಎದೆಬಡಿತ ಜಾಸ್ತಿಯಾಯಿತು.

ಆತನ ಮನಸ್ಸು ಅವನ ತಾರುಣ್ಯ ಕಾಲದತ್ತ ಸಾಗಿತ್ತು.ತುಂಬು ಬಡತನದ ಕುಟುಂಬ .ಇಬ್ಬರು ಅಕ್ಕಂದಿರು,ಇಬ್ಬರು ತಮ್ಮಂದಿರು ಇದ್ದ ಕುಟುಂಬ.ಓದುವ ಹಂಬಲ ಜಾಸ್ತಿ.ಪೇಪರ್ ಹಾಕುವುದು,ಸಂಜೆ ಗ್ಯಾರೇಜು ಕೆಲಸ ಹೀಗೆ ಕೆಲಸ ಮಾಡಿ ಆ ಹಣದಲ್ಲಿ ಫೀಸು ಕಟ್ಟುತ್ತಿದ್ದರು.

ದಿನಾಲೂ ಪೇಪರ್ ಹಾಕಲು ಹೋದಾಗ,ಜಾನಕಿ ಮುಂಜಾನೆದ್ದು ಅಂಗಳ ಗುಡಿಸಿ,ರಂಗೋಲಿ ಹಾಕಿರುತ್ತಿದ್ದಳು.ಮೊದಮೊದಲು ರಂಗೋಲಿ ನೋಡುತ್ತಿದ್ದ ರಾಮ್ ಸ್ವಲ್ಪೇ ದಿನದಲ್ಲಿ ಜಾನಕಿಯತ್ತ ಕಣ್ಣಾಯಿಸಿ,ಇಬ್ಬರ ನಡುವೆಯೂ ಪ್ರೇಮ ಅಂಕುರಿಸಿತು.

ಈ ವಿಷಯ ತಿಳಿದ ಜಾನಕಿ ಮನೆಯವರು ಅವರಿಬ್ಬರನ್ನು ಬೇರ್ಪಡಿಸಲು ಜಾನಕಿಗೆ ಬೇರೆ ಮದುವೆ ಮಾಡಲು ತಯಾರಿ ನಡೆಸಿದ್ದರು.ಇಬ್ಬರೂ ಮನೆ ಬಿಟ್ಟು ಓದಿ ಹೋಗಲು ನಿರ್ಧರಿಸಿ ಮಂಗಳೂರಿಗೆ ಬಂದು ಮದುವೆಯಾಗಿ ೨೫ ವರ್ಷ ಕಳೆದಿತ್ತು.



ತನ್ನ ಮಗಳ ಕತೆಯೂ ಹಿಗಾಯಿತೇನೋ ಎಂದು ಹೆದರಿದರು.
ಅಷ್ಟರಲ್ಲಿ ಮಗಳು ಬಂದು ಬಾಗಿಲು ಬಡಿದಳು.ದಿನಾಲೂ ಸ್ಪೆಷಲ್ ಕ್ಲಾಸ್ ಇರುತ್ತಿದ್ದು,ಇವತ್ತಿನ ಕ್ಲಾಸ್ ಇಲ್ಲವೆಂದು ತಿಳಿದ ತಕ್ಷಣ ಗೆಳತಿಯರೆಲ್ಲ ಸಿನಿಮಾ ನೋಡಲು ಒತ್ತಾಯಿಸಿ ಕರೆದುಕೊಂಡು ಹೋಗಿದ್ದರು.ಮುಂಜಾನೆ ಬಂದ ಬೇರೆ ಪೇಪರಿನವನ ಬಳಿ ಕೇಳಿದಾಗ ದಿನಾಲೂ ಬರುವ ಹುಡುಗನ ತಂದೆ ತೀರಿಕೊಂಡಿದ್ದರಿಂದ ಬರಲಿಲ್ಲವೆಂದು ಕೇಳಿ ರಾಜಾರಾಮರಿಗೆ ಬಹು ದುಃಖವಾಯಿತು....!!!!! 'ಜಾನಕಿ, ಚಹಾ ಮಾಡೆ' ಎಂದು ಹೆಂಡತಿಗೆ ಹೇಳಿದರು.

                                                                                                      -ಪಾರ್ಥವಿ