Friday, August 31, 2012

ನಮ್ಮೂರು



ಎಷ್ಟೋ ದಿನಗಳಾದವು.,ದಿನಗಳೇನು,ಬಹು ತಿಂಗಳಾದವೇನೋ  ಪೆನ್ನು ಹಿಡಿಯದೇ..!!ಗೆಳತಿ ಕಾವ್ಯಾಳನ್ನು ನೆನೆಯದೇ,ಅನೇಕ ದಿನಗಳಾದವು!ಋಷಿಕಾಗೆ,ಅಜ್ಜಿಗೆ ಅಷ್ಟೇಕೆ ಪುಟ್ಟುಗೆ ಪತ್ರ ಬರೆಯದೇ ಬಹು ದಿನಗಳಾದವು.

 ಈ  ಮುಂಚೆ  ಪತ್ರವೊಂದರಲ್ಲಿ ಪ್ರೇಮ ಪತ್ರ ,ಕಾವ್ಯ ಬರೆಯುವ ನಾನು ,ಪ್ರೀತಿಯ ಹುಟ್ಟೂರಿನ ಬಗ್ಗೆ ಒಮ್ಮೆಯೂ ಬ್ಲಾಗಿನಲ್ಲಿ ಬರೆದಿಲ್ಲವಲ್ಲ ಎಂದು ಕೇಳಿದ್ದೆ.ಇಂದು ಏಕೋ ಮನಸ್ಸು ನಮ್ಮೂರನ್ನು ಬಹು ನೆನೆಸಿತು.'ಜನನೀ  ಜನ್ಮಭೂಮಿಶ್ಚ ,ಸ್ವರ್ಗಾದಪಿ ಗರಿಯಸಿ'ಎಂಬಂತೆ ಎಲ್ಲೇ ಇರಲಿ ನಮ್ಮ ಊರಿನಲ್ಲಿ ಸಿಗೋ ಖುಷಿ ಮತ್ತೆಲ್ಲೂ ಸಿಗಲ್ಲ.

ನಮ್ಮೂರು 'ಶಿರಸಿ'.ಕರಾವಳಿ,ಮಲೆನಾಡು,ಬಯಲುಗಳಿಂದ ಕೂಡಿದ ಉತ್ತರಕನ್ನಡ ಜಿಲ್ಲೆಯ ಅತಿ ದೊಡ್ಡ ಊರೆನ್ನಬಹುದು.ಜಿಲ್ಲೆಯ 11 ತಾಲೂಕುಗಳಲ್ಲಿ ಶಿರಸಿಯೂ ಒಂದು.ಶಿರಸಿ ಎಂದರೆ ನೆನಪಾಗುವುದೇ ಶ್ರೀ ಮಾರಿಕಾಂಬಾ ದೇವಿ.








 
ಶಿರಸಿಯ ಗ್ರಾಮ ದೇವತೆ.ಶಿರಸಿಯ ಶ್ರೀಮಾರಿಕಾಂಬಾ  ಜಾತ್ರೆ ಕರ್ನಾಟಕದಲ್ಲೇ ಎರಡನೆ ಅತಿ ದೊಡ್ಡ ಜಾತ್ರೆ.(ಸಾಗರದ ಮಾರಿಕಾಂಬಾ ಜಾತ್ರೆ ಮೊದಲನೆಯದು ).ಮಾರ್ಚ್-ಎಪ್ರಿಲ್ ತಿಂಗಳಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಜಾತ್ರೆಗೆ ಲಕ್ಷಾಂತರ ಮಂದಿ ದೂರದೂರದ ಊರಿಂದ ಬಂದು ತಾಯಿಯ ಆಶೀರ್ವಾದ ಪಡೆಯುತ್ತಾರೆ.
                                         
ಜನರ ಮುಖ್ಯ ಉದ್ಯೋಗ ವ್ಯವಸಾಯವೆನ್ನಬಹುದು.ಅಕ್ಕಿ ಮುಖ್ಯ ಬೆಳೆ.ಅಡಿಕೆ,ತೆಂಗು,ಬಾಳೆ,ಅಲ್ಲದೆ ಯಾಲಕ್ಕಿ,ಕಾಳು  ಮೆಣಸು ಇತ್ಯಾದಿ ಸಾಂಬಾರು ಪದಾರ್ಥಗಳಿಗೂ ಹೆಸರುವಾಸಿ ನಮ್ಮೂರು.

 ವಿದ್ಯಾಭ್ಯಾಸಕ್ಕಾಗಿ ಆವೆಮರಿಯಾ,ಮಾರಿಕಾಂಬಾ,ಎಂ.ಈ.ಎಸ್ ಮುಂತಾದ ಪ್ರಮುಖ ಶಾಲಾ-ಕಾಲೇಜುಗಳು ,ಅಲ್ಲದೆ ಕೃಷಿ ,ತೋಟಗಾರಿಕೆ ವಿಭಾಗಳಲ್ಲಿ ಉನ್ನತ ವ್ಯಾಸಂಗಕಾಗಿ ಕಾಲೇಜುಗಳು,ತಂತ್ರಜ್ಞಾನ,ವೈದ್ಯಕೀಯ ಇತ್ಯಾದಿ ವಿಷಯಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಧಾರವಾಡ,ಹುಬ್ಬಳ್ಳಿ ನಗರಗಳು ಬಹು ಹತ್ತಿರದಲ್ಲಿವೆ.
 


 ಬೇಡರ ವೇಷ, ಯಕ್ಷಗಾನ,ಭರತನಾಟ್ಯ ಮುಂತಾದ ಕಲೆಗಳಲ್ಲೂ ನಮ್ಮೂರವರು ಬಹು ಹೆಸರುವಾಸಿ.ಭಾಗವತರ ನಿರ್ದೇಶನ,ಚಂಡೆ,ಮದ್ದಳೆ ಯೊಂದಿಗೆ  ಹಿಮ್ಮೇಳದಲ್ಲಿ ,ಮುಮ್ಮೇಳದಲ್ಲಿ ಪಾತ್ರಧಾರಿಗಳೊಂದಿಗೆ ಸಾಮಾನ್ಯವಾಗಿ ರಾತ್ರಿ ಸಾಗುವ ಈ ಯಕ್ಷಗಾನ ಆಟಗಳಿಗೆ ಬಹು ವರ್ಷಗಳ ಹಿನ್ನೆಲೆಯಿದೆ.


ಅನೇಕ ದೇವಸ್ಥಾನ,ಚರ್ಚು,ಮಸೀದಿಗಳಿರುವ ಊರಲ್ಲಿ ಎಲ್ಲ ಶಿರಸಿವಾಸಿಗಳು 'ನಾವೆಲ್ಲರೂ ಒಂದೇ' ಎಂಬಂತೆ ಎಲ್ಲಾ

ಹಬ್ಬವನ್ನೂ 'ನಮ್ಮ ಹಬ್ಬ'ವೆಂಬಂತೆ ಬೇಧಭಾವವಿಲ್ಲದೇ ಆಚರಿಸುತ್ತಾರೆ.



'ಮುಸುಕಿನ ಬಾವಿ' ಶಿರಸಿಯ ಇನ್ನೊಂದು ಆಕರ್ಷಣೆ.ಹಿಂದೆ ಸೋಂದಾ ರಾಣಿ ಸುರಂಗ ಮಾರ್ಗದಿಂದ ಸ್ನಾನ ಮಾಡಲು ಬರುತ್ತಿದ್ದ ಕೊಳವದು.ಬಹು ವರ್ಷಗಳಿಂದ ಪಾಲು ಬಿದ್ದು ಯಾರಿಗೂ ತಿಳಿಯದಿದ್ದ ಪ್ರದೇಶವನ್ನು ಈಗ ಪುನರ್ ನಿರ್ಮಾಣ ಮಾಡಿ ,ಮಕ್ಕಳಿಗೆ ಆಟವಾಡಲು ಪುಟ್ಟ ಬಯಲನ್ನು ಮಾಡಿರಲು,ಸಂಜೆಯ ಸಮಯದಲ್ಲಿ 'ಮುಸುಕಿನ ಬಾವಿ'ಯ ಬಳಿ ಹೋದರೆ ದಣಿದ ಮನ ಉಲ್ಲಸಿತಗೊಂಡಿತು.




 


 









"ಮರುಜನ್ಮವೆಂಬುದಿರೆ ಮನುಷ್ಯನಾಗಿಯಲ್ಲದಿದ್ದರೂ,ಮರಿದುಂಬಿಯಾಗಿ ಈ ಮಣ್ಣಿನಲ್ಲಿ ಹುಟ್ಟಬೇಕು" ಎಂದು ಕವಿ ಪಂಪ ಬರೆದದ್ದು ಹಿಂದೆ ಕದಂಬರ ರಾಜಧಾನಿಯಾಗಿದ್ದ ಬನವಾಸಿಯ ಕುರಿತು. ಬನವಾಸಿ ಶಿರಸಿಯಿಂದ  ಕೇವಲ 23 ಕಿ.ಮೀ ದೂರದಲ್ಲಿದೆ.ಸಹಸ್ರಲಿಂಗ,ಯಾಣ,ಸೋಂದ,ಮಂಜುಗುಣಿ,ಇತ್ಯಾದಿ ಯಾತ್ರಾಸ್ಥಳಗಳೂ,ಮಾಗೋಡ,ಶಿವಗಂಗಾ,ಉಂಚಳ್ಳಿ,ಜೋಗ ,ಸಾತೊಡ್ಡಿಯಂಥ ಜಲಪಾತಗಳೂ ಶಿರಸಿಯಿಂದ ಬಹು ಹತ್ತಿರದಲ್ಲಿವೆ.

ಬಹು ಚಳಿಯೂ ಅಲ್ಲದ,ಬಹು ಬಿಸಿಲ ಬೇಗೆಯೂ ಅಲ್ಲದ ಬೆಚ್ಚನೆಯ ವಾತಾವರಣ ಯಾರನ್ನಾದರೂ ಶಿರಸಿಯತ್ತ ಧಾವಿಸುವಂತೆ ಮಾಡುತ್ತದೆ.ನೀವೂ ಶಿರಸಿಗೆ ಬೇಗ ಬಂದು ಶಿರಸಿಯ ವಿಹಂಗಮ ನೋಟ ವನ್ನು ನೋಡಿ ಸವಿಯಿರಿ.ಸುಸ್ವಾಗತವು ನಿಮಗೆ.

 

Monday, August 20, 2012

ಚಿತ್ರಾಯಣ





ನನ್ನ ನಲ್ಮೆಯ ಹಿರೋ ,
             ಮದುವೆಯಾಗಿ ಹೊಸ ಮನೆಗೆ ಹೊಸ ಸಾಮಾನು ಖರೀದಿಸಿ-ಜೋಡಿಸಿ,ಮಾಡುವುದರೊಳಗೆ  ಸ್ವಲ್ಪ ದಿನಗಳು ಕಳೆದವು.ಈ  ನಡುವೆ ಹೇಗಾದರೂ ಮಾಡಿ ಸಿನಿಮಾ ನೋಡಬೇಕೆಂದು 'ದಮ್ಮು' ನೋಡಿ ಬಂದೆವು.



  ಈ  ನಂತರ 'ಶಗುನಿ','ಕಟಾರಿವೀರ ಸುರ ಸುಂದರಾಂಗಿ' ಹೀಗೆಲ್ಲಾ ವಾರಾಂತ್ಯದಲ್ಲಿ ಅನೇಕ  ಸಿನಿಮಾಗಳನ್ನು
ನೋಡಿದ್ದೆವು.  ವಾರಾಂತ್ಯದಲ್ಲಿ ಕೆಲವೊಮ್ಮೆ ಆಫೀಸ ಕೆಲಸ ಇರುವುದರಿಂದ ಬೇರೆ ದಿನಗಳಲ್ಲಿ ಆಫೀಸು ಮುಗಿದ ನಂತರ ಹೋಗೋಣವೆಂದು ಪ್ಲಾನ್ ಮಾಡಿದ ದಿನಗಳೂ ಇವೆ.ಹಲವಾರು ಬಾರಿ ಆಫೀಸಿನಲ್ಲಿ ತುಂಬಾ ಕೆಲಸ ಇರುವುದರಿಂದ ಅದನ್ನು ಮುಂದೂಡಬೇಕಾಗಿದ್ದವು.



    ಒಮ್ಮೆ ರಾತ್ರಿ ಕೆಲಸವಿದೆ ಎಂದು ಬೇಗ ಮನೆಗೆ ವಿಶ್ರಾಂತಿಗೆಂದು ಆಫೀಸಿನಿಂದ ಮರಳುತ್ತಾ,ನಂತರ ಆ ದಿನ ಕೆಲಸವಿಲ್ಲವೆಂದು ತಿಳಿದು 'ಅಣ್ಣ ಬಾಂಡ್ ' ಸಿನಿಮಾ ಟಿಕೆಟ್ ತೆಗೆದುಕೊಂಡು ನನಗಾಗಿ ಕಾದಿದ್ದೆ.



'ಕಹಾನೀ' ನೋಡಬೇಕೆಂದುಕೊಂಡು,ಆದರೆ ಆ ವಾರಾಂತ್ಯದಲ್ಲಿ ನಾವು ಊರಿಗೆ ಹೋಗಿ,ಇನ್ನೊಂದು ವಾರಾಂತ್ಯ ಕೆಲಸ ಎನ್ನುವುದರೊಳಗೆ ಚಿತ್ರವನ್ನು ನೋಡಲಾಗಲಿಲ್ಲ.ಗೆಳತಿ ಚಿತ್ರಾಳ ಬಳಿ ಪೆನ್ ಡ್ರೈವ್ ನಲ್ಲಿ ಪಡೆದು ನೋಡಲು,ಪ್ರಿಂಟ್ ಚೆನ್ನಾಗಿಲ್ಲ ಎಂದು ನೋಡಿರಲಿಲ್ಲ.ಎರಡು ದಿನದ,ಹಿಂದೆ ಟಿ.ವಿ.ಯಲ್ಲಿ ನೋಡಿ  ಅಂತೂ ಚಿತ್ರ 'ಕಹಾನೀ' ಮುಗಿಯಿತು!!!


ಬಂದ ಮೊದಲ ವಾರವೇ 'ಈಗ' ಚಿತ್ರ ನೋಡಿದ ನಾವು,ಊರಿಗೆ ಹೋಗಲು ಅಣ್ಣನವರಿಗೆ ಚಿತ್ರ ನೋಡಿರೆಂದು ಶಿಫಾರಸ್ಸು ಮಾಡುತಿರಲು,ಅವರೂ ನಮ್ಮನ್ನು ಕರೆಯಲು ಮತ್ತೊಮ್ಮೆ ನೋಡಿದೆವು.ಅಲ್ಲದೆ ಗೆಳೆಯನಿಗೆ ಆ ಚಿತ್ರ ತೋರಿಸಬೇಕೆಂದು,ಅಂತೂ ಇಂತೂ ಮೂರು ಬಾರಿ 'ಈಗ' ನೋಡಿದೆವು.ಗೊತ್ತಿಲ್ಲ,ನಾಳೆ ಇನ್ನ್ಯಾರಿಗಾದರೂ ಕಂಪನಿ ಕೊಡಲು,ಅವರೊಂದಿಗೆ ಹೋಗಬಹುದು!!ನಮ್ಮಿಬ್ಬರಿಗೂ ಅಷ್ಟುಇಷ್ಟವಾಗಿರಬೇಕು,ಈ  ಚಿತ್ರ.


ಕಳೆದವಾರ 'ಜುಲಾಯಿ' ಚಿತ್ರ ನೋಡಬೇಕೆಂದು ನನ್ನ ಆಫೀಸ ಮುಗಿದ  ನಂತರ ನನಗೆ ಚಿತ್ರ ಮಂದಿರದ
ಬಳಿ ಹೋಗಿ ಟಿಕೆಟ್ ಕೊಳ್ಳಲು  ಹೇಳಿ ,ಇನ್ನೇನು ಚಿತ್ರ ಶುರುವಾಗ  ಎರಡು ನಿಮಿಷ ಮುಂಚೆ  ಬಂದಿದ್ದೆ.ಬಸ್ಸಿನಲ್ಲಿ ಕುಳಿತು ಬರಲಾಗುತ್ತೋ ಇಲ್ಲವೋ ಎಂಬ ಯೋಚನೆ ಆಗಿತ್ತು ನಿನಗೆ.ಮಾರನೇ  ದಿನ ಮತ್ತೆ ಗೆಳೆಯರೊಂದಿಗೆ 'ಈಗ' , ಸಂಜೆ
'ಐಸ್  ಏಜ್ 4',ರಾತ್ರಿ ಟಿ.ವಿ.ಯಲ್ಲಿ 'ವೆಡ್ ನೆಸ್ ಡೇ '.ಹೀಗೆ 24 ತಾಸಿನಲ್ಲಿ 4 ಸಿನಿಮಾ ನೋಡಿದ್ದೆವು.


          ಹೀಗೆ ಚಿತ್ರಾಯಣ ನಡೆಯುತ್ತಿರಲು,ಇಂದು ಇನ್ನೊಂದು ಸಿನಿಮಾ ನೋಡೋಣ ಎಂದಿರುವೆ.ಕಾಯುತ್ತಿದ್ದೀನಿ ನಿನ್ನ ಬರುವಿಗಾಗಿ,ಸಿನಿಮಾಗಾಗಿಯಲ್ಲ!!
       
                                                                                -ಇಂತಿ ನಿನ್ನ ಪ್ರೀತಿಯ,
                                                                                     ಚಿನ್ನು



   

ನಮ್ಮ ಮನೆ -ಅಡುಗೆ ಕಥೆ


ನಲ್ಮೆಯ ಪುಟ್ಟು ,

      ಅಯ್ಯೋ?! ಗೌರವ ಕೊಟ್ಟು ರೀ ಅಂತಿಲ್ಲ, ಅಂತ ಆಶ್ಚರ್ಯ ಪಡ್ತಿದಿಯಾ ? ಎಷ್ಟಂದರೂ ನೀನು ನನ್ನ ಪುಟ್ಟುನೇ ಆಲ್ವಾ,ಕರೆದರೆ ಏನೂ ತಪ್ಪಿಲ್ಲಾ ಅನ್ಕೊತೀನಿ.
 
      ಮದುವೆ   ಆದ ಹೊಸತರಲ್ಲಿ ನಾವಿಬ್ಬರೂ ಅಡಿಗೆಯಲ್ಲಿ ಎಲ್ ಬೋರ್ಡು.ಮಾಡಲು ಬರುತ್ತಿದ್ದುದು ಅನ್ನ ,ಬೇಳೆಸಾರು.ಮದುವೆಯಾಗಿ ಈ  ಮನೆಗೆ ಬಂದ ಮೊದಲ ದಿನಗಳಲ್ಲಿ ,ಅಡಿಗೆ ಸಾಮಾನಿಲ್ಲದೆ,ದಿನಾಲೂ ಎಸ್ .ಎಲ್ .ವಿ (ಹೋಟೆಲ್ ) ಊಟ .ಆ ಹೋಟೆಲ್ ಉದ್ಯೋಗಿಗಳೆಲ್ಲ ನಮ್ಮ ಊರಿನವರೆಂದು,ಅವರೊಂದಿಗೆ ಚೆನ್ನಾಗಿ ಹರಟೆ ಹೊಡೆದು ಬಂದಿದ್ದೆವು.

           ಗ್ಯಾಸ್ ಕನೆಕ್ಷನ್ಗಾಗಿ ವಿಚಾರಿಸಿ ಸೋತು ,ಎಲ್ಲಾ ಗೆಳೆಯರ ಬಹುಮತಾಭಿಪ್ರಾಯದಿಂದ  ಇಂಡಕ್ಷನ್ -ಸ್ಟೋವ್
 ಕೊಂಡು ತಂದು,ತಂದ ದಿನವೇ ಹಾಲುಕ್ಕಿಸಿ (ಹಾಲುಕ್ಕಿಸುವ ಶಾಸ್ತ್ರ ಮುಗಿದಿದ್ದರೂ ), ಅನ್ನ, ಬೇಳೆಸಾರು ಮಾಡಿ ಊಟ
 ಮಾಡಿದ್ದೆವು .ನೆಂಚಿಕೊಳ್ಳಲು ಉಪ್ಪಿನಕಾಯಿ ತರಲು ನಾವು ಮರೆತಿರಲಿಲ್ಲ .ಮಾರನೆ ದಿನವೇ ಸರ್ಪ್ರೈಸ್ ನೀಡಲೆಂದು
 ನಾ   ಮಾಡಿದ ಗುಲಾಬ್ ಜಾಮೂನು.ಅದಕ್ಕೆ ಮಾಡಿದ ಜಾಸ್ತಿ ಪಾಕ ಇನ್ನೆರಡು ದಿನದಲ್ಲಿ ಮತ್ತೆ ಜಾಮೂನು
 ತಯಾರಿಸುವಂತಾಯಿತು.




         ಅಮ್ಮನಿಗೆ  ಫೋನಾಯಿಸಿ ಒಂದೊದಾಗಿ ಅಡಿಗೆ ಮಾಡಿ,ದಿನಾಲೂ ನಮ್ಮ ಮನೆಯಲ್ಲಿ ಹೊಸ ರುಚಿ .
  "ಅಮ್ಮಾ ,ದಿಡೀರ್  ಅಂತ ಹತ್ತೇ ನಿಮಿಷದಲ್ಲಿ ಮಾಡುತ್ತಿದ್ದಿಯಲ್ಲ, ಆ ಸಾರು  ಹೇಗೆ ಮಾಡುತ್ತಿ ??!!! ಅತ್ತಿಗೆ,  ಒಡೆದ ಹಾಲಿನಿಂದ ಸಿಹಿ ತಿನಿಸು  ಹೇಗೆ ಮಾಡುವುದು.ಅತ್ತೆ ಆ ಕಾಳಿನ ಸಾರು ಹೇಗೆ ಮಾಡುತ್ತಿ ?ಎಂದೆಲ್ಲ ಇಬ್ಬರೂ    ಫೋನಾಯಿಸುವುದೇ ದಿನಚರಿಯಾಗಿದ್ದವು.



        ಊರಿಗೆ ಹೋದರೂ "ಅಮ್ಮಾ ,ಈ ಪಲಾವ್ ಹೇಗೆ ಮಾಡಿದಿರಿ ??","ಬೇಳೆ ಸಾರು ಇಷ್ಟು ಚೆನ್ನಗಾಗಲು ಏನು
 ಮಾಡಬೇಕು"."ಈ  ಸಾರಿಗೆ ಯಾವ ಒಗ್ಗರಣೆ ಉತ್ತಮ " ಹೀಗೆಲ್ಲ  ನೂರಾರು ಪ್ರಶ್ನೆಗಳೊಂದಿಗೆ ಶುರುವಾಯಿತು ನಮ್ಮ ಮನೆ ಅಡುಗೆ ಕಥೆ.    

       ಪ್ರತಿ ವಾರಾಂತ್ಯದಲ್ಲಿ ನೆಂಟರನ್ನು,ಗೆಳೆಯ-ಗೆಳತಿಯನ್ನೆಲ್ಲ ಕರೆದು ಎಲ್ಲಾ ಸೇರಿ ಅಡಿಗೆ ಮಾಡಿ ಎಲ್ಲರೂ ಆಟವಾಡುತ್ತಾ ಸಮಯ ಕಳೆಯುತ್ತಿದ್ದವು.ಮೊದಮೊದಲು ಮಾಡುತ್ತಿದ್ದುದ್ದು ಅನ್ನ,ಬೇಳೆಸಾರು ,ಸಾಂಬಾರು ,ಕೋಸಂಬರಿ .ಮನೆಗೆ ಯಾರು ಬಂದರೂ ಅದನ್ನೇ ಮಾಡಿ ಬಡಿಸುತ್ತಿದ್ದುದು.ನಂತರ ನಿಧಾನವಾಗಿ ಕಾಳು ಪಲ್ಯ,ಬಜ್ಜಿ,ಶ್ಯಾವಿಗೆ ಪಾಯಸ ಇತ್ಯಾದಿಗಳನ್ನೂ ಮಾಡತೊಡಗಿ ಇತರೆ ಸಿಹಿತಿನಿಸುಗಳನ್ನೂ ಮಾಡುತ್ತಿದ್ದೇವೆ.

     ನಮ್ಮಿಬ್ಬರಿಗೆ ಮಾತ್ರ ಅಡಿಗೆ ಮಾಡುವಾಗ ಸರಿಯಾಗಿ ಆದರೂ,ಇನ್ಯಾರಾದರೂ ಬರುತ್ತಾರೆ ಎಂದರೆ ಟೆನ್ಷನಲ್ಲಿ ಏನಾದರೂ ಹೆಚ್ಚು ಕಡಿಮೆ ಆಗುತ್ತಿದ್ದವು.ಅಣ್ಣ ಸ್ವಲ್ಪ ಮೆತ್ತಗಾಗುವುದು,ಸಾಂಬಾರಿನಲ್ಲಿ ಯಾವುದಾದರೂ ತರಕಾರಿ
ಬೇಯದಿರುವುದು,ಹೀಗೆಲ್ಲ.ಆದರೂ ಅದನ್ನು ಬಿಡದೇ ಮೆತ್ತಗಾದ ಅನ್ನ ಒಗ್ಗರಣೆ ಹಾಕಿ ಮೊಸರು ಬೆರೆಸಿ ಮೊಸರನ್ನ ಮಾಡಿ ಗೆಳೆಯರೆಲ್ಲರೂ ಚಪ್ಪರಿಸಿ ತಿನ್ನುವಂಥ ಉಪಾಯಕ್ಕೆ ತಲೆದೂಗಲೇ ಬೇಕು!


   ಸ್ವಲ್ಪ ದಿನಗಳ ಹಿಂದೆ ಆಫೀಸಿನಲ್ಲಿ 'ಪೊಟ್ ಲಕ್ ' (ನಾವೇ ,ನಮ್ಮ ಕೈಯ್ಯಾರೆ  ಅಡುಗೆ ಮಾಡಿ,ಎಲ್ಲರೂ ಕುಳಿತು ಒಟ್ಟಿಗೆ ಊಟ ಮಾಡುವುದು.) ಇದ್ದಾಗ ಏನು ಅಡುಗೆ ಮಾಡುವುದು ಎಂಬ ತಳಮಳದಲ್ಲಿರಲು,ಬಟಾಟೆ ಪಲ್ಯ,ಶ್ಯಾವಿಗೆ ಪಾಯಸ ಮಾಡುವ ಉಪಾಯ ಹೇಳಿ ಇಬ್ಬರೂ ಸೇರಿ ಮಾಡಿದ ಪಲ್ಯ ಮತ್ತು ಪಾಯಸ ಬಲು ಚೆನ್ನಾಗಿತ್ತು.



   ಇವೆಲ್ಲಾ ನಾವು ಮಾತನಾಡಿಕೊಳ್ಳಬಹುದು,ಆದರೆ ಅವು ಪತ್ರ ಬರೆದು ಹೇಳಿದಷ್ಟು ರಸಪೂರಿತವಾಗಿರಲ್ಲ .ಹೀಗಿದೆ,ನಮ್ಮ ಅಡುಗೆ ಮನೆ ಕಥೆ.ಪತ್ರದಲ್ಲಿರೋ ಮಜಾನೇ  ಬೇರೆ. ಪತ್ರ ಬರೆದ್ರೆ ,ಓದಿದರೆ ಒಳ್ಳೆ

ಕಳಿತ ಮಾವಿನ ಹಣ್ಣಿನ ರಸಾಯನ ಮಾಡಿ ತಿಂದ ಹಾಗಿರುತ್ತೆ .'ಸರಿ ಅಡಿಗೆ ಆಗಿದೆ'.ನಿಮ್ಮಿಷ್ಟದ ಬೇಳೆಸಾರು,ಬದನೇಕಾಯಿ ಬಜ್ಜಿ ಮಾಡಿದ್ದೀನಿ ,ಊಟಕ್ಕೆ ಬನ್ನಿ ....!!!!

                                                                           -ಇಂತಿ ನಿನ್ನ  ಪ್ರೀತಿಯ ,
                                                                                ಚಿನ್ನು